Tuesday, August 9, 2022

ಚಾಮುಂಡಿ ಬೆಟ್ಟದಲ್ಲಿ ಲಡ್ಡು ಗೋಲ್ಮಾಲ್

೦೫ ಆಗಸ್ಟ್ ೨೦೨೨,

ಬಹಳ ವರ್ಷಗಳ ಬಳಿಕ ಮತ್ತೆ ಮೈಸೂರು ಸುತ್ತಾಡುವ ಅವಕಾಶ ಒದಗಿ ಬಂದಿತು. ಕುಟುಂಬದವರೊಂದಿಗೆ ಮೂರು ದಿನಗಳ ಕಾಲ ಖುಷಿಯಿಂದ ಮೈಸೂರು ಸುತ್ತಾಡಿದೆವು. ಆಗಾಗ ಜಿಟಿಜಿಟಿ ಹಾಗು ಕೆಲವೊಮ್ಮೆ ಜೋರು ಮಳೆ ಸುರಿದರೂ, ನಾವು ತಿರುಗಾಡುವ ಸಮಯದಲ್ಲಿ ಮಳೆರಾಯ ಬಿಡುವು ನೀಡು ನಮ್ಮ ಪ್ರವಾಸಕ್ಕೆ ಸಹಕರಿಸಿದನು :-).

ಅಂತೆಯೇ ಮೊದಲ ದಿನ ಶುಕ್ರವಾರದಂದು (ವರಮಹಾಲಕ್ಷ್ಮೀ ಪುಣ್ಯದಿನ ಬೇರೆ), ಚಾಮುಂಡಿ ಬೆಟ್ಟ ನಮ್ಮ ಮೊದಲ ಗುರಿಯಾಗಿತ್ತು. ತಾಯಿ ಚಾಮುಂಡಿಯನ್ನು ಕಂಡು ಸುಮಾರು ೧೦ ವರ್ಷವೇ ಆಗಿರಬೇಕು. ಇಂದು ಶುಭದಿನದಂದು ಆ ಅವಕಾಶ ಒದಗಿ ಬಂದಿದ್ದು ನಮ್ಮ ಪುಣ್ಯ. ಅಷ್ಟೇನು ಜನಜಂಗುಳಿ ಇರಲಿಲ್ಲ. ಮಲೆನಾಡಿನಲ್ಲಿ ಮುಂಗಾರು ಬಿರುಸು ಪಡೆದರೆ, ಬಯಲುಸೀಮೆಯಲ್ಲಿ ಜೋರು ಗಾಳಿ ಜೊತೆಗೆ ಜಿಟಿಜಿಟಿ ಮಳೆ ಸಾಥ್ ನೀಡುವುದು ಸಾಮಾನ್ಯ. ಗಾಳಿ ಬಹಳ ಬಿರುಸಾಗಿಯೂ ಜೊತೆಗೆ ತಣ್ಣನೆ ಬೀಸುತ್ತಿತ್ತು. ಕೋತಿಗಳ ಕಾಟದ ಮಧ್ಯೆ, ಜನರ ನೂಕುನುಗ್ಗಲಿನ ನಡುವೆ, ೩೦ ನಿಮಿಷದ ಒಳಗೆ ದೇವಿಯ ದರ್ಶನ ಮುಗಿಸಿದೆವು. ತಾಯಿಯನ್ನು ಕಂಡು ಮನಸ್ಸು ಕೂಡಾ ಹಗುರವಾಗಿ ಸಂತೋಷವಾಯಿತು. ತಾಯಿಯ ಕೃಪೆಯಿಂದ ನಮ್ಮ ದರ್ಶನದ ಬಳಿಕವೇ ಮಳೆ ಸುರಿಯಲಾರಂಭಿಸಿತು. 

ಪ್ರತಿ ಪುಣ್ಯ ಕ್ಷೇತ್ರ ದರ್ಶನದ ಬಳಿಕ, ಅಲ್ಲಿಯ ಲಾಡು ಕೊಳ್ಳುವ ಅಭ್ಯಾಸ ನನಗೆ. ಚಾಮುಂಡಿ ಬೆಟ್ಟದಲ್ಲೂ ಅದೇ ಅಭ್ಯಾಸ ಮುಂದುವರೆಸಿದೆ.  ದೇವಸ್ಥಾನದ ಒಳಗಡೆ ೨ ಲಡ್ಡುವಿಗೆ ೩೦ ರೂಪಾಯಿ ನಿಗದಿಪಡಿಸಿದ್ದರು. ಮಂಗಗಳ ಕಾಟದಿಂದ ನಾನು ಹೊರಗೆ ಖರೀದಿಸಲು ನಿರ್ಧರಿಸಿದೆ. ದೇವಸ್ಥಾನದ ಆವರಣದಿಂದ ಹೊರಬಂದ ನಂತರ, ಲಡ್ಡು ಕೌಂಟರ್ ನಲ್ಲಿ ಲಡ್ಡು ತೆಗೆದುಕೊಳ್ಳಲು ಹೋದೆವು. ಅಲ್ಲಿ ೩ ಲಡ್ಡುವಿಗೆ ೫೦ ರೂಪಾಯಿ ಎಂದು ಹೇಳಿದನು. ನಾನು ಎರಡು ಸಾಕು ಎಂದಾಗ, "ಚೆಂಜ್ ಇಲ್ಲ, ಮೂರು ತಗೋಬೇಕು" ಅಂತಾ ಪಟ್ಟುಹಿಡಿದನು. ನಾನು ವಿಧಿಯಿಲ್ಲದೇ ೫ ರೂಪಾಯಿ ಅಧಿಕ ಶುಲ್ಕ ನೀಡಿ ಖರೀದಿಸಿದೆ.



ದೇವರ ಹೆಸರಲ್ಲಿ ಎಂತಹ ಗೋಲ್ಮಾಲ್ ನೋಡಿ. ಚೇಂಜ್ ಇಲ್ಲ ಅಂತಾ ಸುಲಿಗೆ ಮಾಡೋದಾ. ಇಂದಿನ  ಮೊಬೈಲ್ ಪೇಮೆಂಟ್ ಯುಗದಲ್ಲಿ "ಚೇಂಜ್ ಇಲ್ಲ" ಅನ್ನೋ ಪದವನ್ನೇ ಕೇಳದೆ ಬಹು ವರ್ಷಗಳಾಗಿವೆ. ಸರಕಾರಿ ಯಂತ್ರಗಳೇ ಈ ರೀತಿ ಹೇಳಿದರೆ ಹೇಗೆ.  ಮತ್ತೊಂದು ಮಾತು ಏನೆಂದರೆ, ವಿಶೇಷ ದರ್ಶನದ ಟಿಕೆಟ್ ಪಡೆದವರಿಗೆ ಹೊರಗಡೆ ಲಾಡು ವಿತರಿಸಲಾಗುತ್ತದೆ. ಇಲ್ಲಿ ಹಾಗೆಯೇ ಕೊಳ್ಳುವವರಿಗೆ ಇರುವ ಕೌಂಟರ್ ಅಲ್ಲ ಅಂದುಕೊಳ್ಳುತ್ತೇನೆ. ಏಕೆಂದರೆ ನನಗೆ ಅವನು ಬಿಲ್ ಕೊಡಲಿಲ್ಲ. ಅಂದರೆ ಈ ದುಡ್ಡು ಅವನ ಅಕೌಂಟ್ ಗೆ ಸೇರುತ್ತದೆಯೇನೋ? ಇರಲಿ ಒಟ್ಟಿನಲ್ಲಿ ಎಲ್ಲಾ ಸುಲಿಗೆ. ನಮ್ಮಂತ ಸಾಮಾನ್ಯ ಜನರು ದೇವಸ್ಥಾನದಲ್ಲಿ ಯಾಕೆ ವಾದ-ವಿವಾದ ಅಂತಾ ಸುಮ್ಮನಿರುತ್ತೇವೆ. ಅದಕ್ಕೆ ಸರಿಯಾಗಿ ಲಾಡು ವಿತರಿಸುವವ ಕೂಡಾ "ಬೇಕಾದ್ರೆ ತಗೊಳ್ಳಿ ಇಲ್ಲಾಂದ್ರೆ ಹೋಗ್ರಿ" ಅಂತಾ ಸಿಟ್ಟಿನಲ್ಲಿ ಉಡಾಫೆಯಿಂದ ಉತ್ತರಿಸುತ್ತಾರೆ. ಇಂತಹ ಹಲವು ಒರಟು ನುಡಿಗಳನ್ನು ಬೆಳಗ್ಗಿಯಿಂದ ಕೇಳಿದ್ದೆ. ಇರಲಿ ಬಿಡಿ ಅದೊಂದು ಬೇರೆಯೇ ಕಥೆ. ಟ್ಯಾಕ್ಸ್ ದುಡ್ಡಿನಲ್ಲಿ ಸರಕಾರ ಸೌಕರ್ಯಗಳನ್ನು ನೀಡುತ್ತವೆ. ಅದನ್ನೇ ಬಂಡವಾಳವಾಗಿ ಇಟ್ಟುಕೊಂಡು ಈತರ ಹಗಲು ಸುಲಿಗೆ ಮಾಡುತ್ತಾರೆ. ನಿಯತ್ತಿನ್ನಲಿ ಟ್ಯಾಕ್ಸ್ ಕಟ್ಟುವವರ ಪಾಡು ಇಷ್ಟೇ ಅಂತಾ ನಾನು ಸುಮ್ಮನೆ ಮೈಸೂರು ಕಡೆ ಪ್ರಯಾಣ ಬೆಳೆಸಿದೆ. 

ಒಟ್ಟಿನಲ್ಲಿ ಗೋಲ್ ಗೋಲ್ ಲಡ್ಡು ಮಾರಾಟದಲ್ಲಿ ದೊಡ್ಡ ಗೋಲ್ಮಾಲ್ ನಡೆಯುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ತಾಯಿ ಚಾಮುಂಡಿ ನೀನೇ ಕಾಪಾಡಬೇಕು.

ಈ ಬ್ಲಾಗ್ ವೀಕ್ಷಿಸಿದವರಾದರೂ ಜಾಗೃತರಾಗಿ, ಮೋಸಹೋಗಬೇಡಿ!

No comments:

Post a Comment

Printfriendly

Related Posts Plugin for WordPress, Blogger...