Sunday, November 18, 2018

ಹಾಗೆ ಸುಮ್ಮನೆ - ಎಂತಾ ಮರುಳಯ್ಯ ಇದು ಎಂತಾ ಮರಳೋ!

ಕೆಳಗಿನ ಚಿತ್ರಗಳನ್ನು ನೋಡಿ




ಒಂದು ಬ್ರಹ್ಮಾವರ ಮತ್ತೊಂದು ಉದ್ಯಾವರ
ಒಟ್ಟಾರೆ ವಾಹನ ಚಾಲಕರಿಗೆ ಸಂಚಕಾರ :-(
ಟೋಲ್ ಕಟ್ಟುವವರಿಗೆ ಗ್ರಹಚಾರ!

ಏನಪ್ಪಾ ಲಾರಿಗಳ ಸರತಿ ಸಾಲು ಅಂದ್ರೆ ಮರಳು ಲಾರಿಗಳ ಮುಷ್ಕರ. ಬೇರೆಲ್ಲೂ ಜಾಗ ಇಲ್ಲ ಅನ್ನೋತರ ರಸ್ತೆ ಮಧ್ಯೆಯೇ ಮೊಕ್ಕಾಂ ಹೂಡಿದ್ದಾರೆ. ತಮ್ಮ ಇರುವಿಕೆಯನ್ನು ತೋರಿಸುವುದಕ್ಕೋ ಅಥವಾ ಬೇರೆ ಯಾವ ಕಾರಣಕ್ಕೋ‌ ಗೊತ್ತಿಲ್ಲಾ, ರಸ್ತೆಯ ಬಳಿ ವಾಹನ ನಿಲ್ಲಿಸಿದ್ದಂತೂ ಸರಿಯಲ್ಲ. ಅಲ್ಲಾ ಮಾರಾಯ್ರೆ ನಿಮ್ಮ ಮುಷ್ಕರ ಕಾರಣ ಸರಿಯೋ ತಪ್ಪೋ ನಾ ಕಾಣೆ ಆದರೆ ರಸ್ತೆಯನ್ನು ಈ ಪರಿಯಲ್ಲಿ ಆವರಿಸಿದ್ದು ಎಷ್ಟು ಸರಿ ಅದು ಕೂಡಾ ಮೈಲುಗಟ್ಟಲೆ. ಅದು ಬೇರೆ ಇದು ಬಿಟ್ಟಿ ರಸ್ತೆಯಲ್ಲ. ಸ್ಥಳಿಯರಿಗೆ ಟೋಲ್ ಇದಿಯೋ ಇಲ್ವೋ ಗೊತ್ತಿಲ್ಲಾ ಆದರೆ ಬೆಂಗಳೂರಿನ ನೊಂದಣಿ ಇದ್ದು ಊರಿನಲ್ಲಿ ಸಂಚರಿಸುತ್ತಿರುವ ನನ್ನಂತವರು ಟೋಲ್ ಕಟ್ಟಿ ರಸ್ತೆಯನ್ನು ಉಪಯೋಗಿಸಬೇಕು. ದುಡ್ಡು ಕೊಟ್ಟು ಆರಾಮಾಗಿ ವಾಹನ ಚಲಾಯಿಸುವಂತಿಲ್ಲ. ದುಡ್ಡು ಕೊಟ್ಟು ಪೆಟ್ಟು ತಿನ್ನುವ (ಅಥವಾ ಮರಳು ತಿನ್ನುವ) ಗ್ರಹಚಾರ ನಮಗೆ.

ಅದಕ್ಕೆ ಸರಿಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ರಸ್ತೆಗಳು. ಎಲ್ಲಿ ನೋಡಿದರಲ್ಲಿ ಬ್ಯಾರಿಕೇಡ್. ರಾತ್ರಿಯಾದಂತೆ ಬೀದಿ ದೀಪಗಳು ಉರಿಯಲ್ಲ. ಕೆಲವೆಡೆ ರಸ್ತೆ ಕಾಮಗಾರಿಯೆ ಮುಗಿದಿಲ್ಲ ಅದಕ್ಕಿಂತ ಮುಂಚೆಯೆ ಟೋಲ್. ಈತರಹ ಲಾರಿಗಳು ಗುಮ್ಮನಂತೆ ರಾತ್ರಿ ಸಮಯದಲ್ಲಿ ನಿಂತರೆ ಮರಣ ಯಾತ್ರೆ ನಿಶ್ಚಿತ! ಮೊದಲೇ ದೀಪಗಳಿಲ್ಲ ಜೊತೆಗೆ ಅನ್ಯಾಯ ಎನ್ನುವವರು ನ್ಯಾಯಯುತವಾಗಿ ರಿಫ್ಲೆಕ್ಟರ್ ಕೂಡಾ ಅಂಟಿಸಿರುವುದಿಲ್ಲ. ೮೦ಕಿ.ಮೀ ವೇಗದಲ್ಲಿ ವಾಹನ ಬಂದರೆ, ಈ ಲಾರಿಗಳು ಕತ್ತಲೆಯಲ್ಲಿ ಕಾಣದೆ ಡಿಕ್ಕಿ ಹೊಡೆಯುವುದು ಗ್ಯಾರಂಟಿ. ಅಂದಂತೆ ೮೦ಕಿ.ಮೀ ಇದು ನಿಯಮಾನುಸಾರವಾದ ವೇಗ ಈ ಹೆದ್ದಾರಿಯಲ್ಲಿ.

ಅಂದಹಾಗೆ ನ್ಯಾಯ ಕೇಳುವವರು ಮೇಲೆ ಹೇಳಿದಂತೆ ರಿಫ್ಲೆಕ್ಟರ್ ಅಂಟಿಸುವುದಿಲ್ಲ. ಜೊತೆಗೆ ಪಾರ್ಕಿಂಗ್ ಲೈಟು ದೂರದ ಮಾತು. ತಿರುಗಿಸುವಾಗ ಇಂಡಿಕೇಟರ್ ಹಾಕುವುದು ದೂರದ ಮಾತು. ಮರಳು ಸಾಗಿಸುವಾಗ ಟಾರ್ಪಲ್ ಹಾಸುತ್ತಾರೆಯೇ? ಕೆಲವರು ಹೌದು ಮತ್ತೆ ಕೆಲವರು ಇಲ್ಲ. ಹಾಸುವವರ ಟಾರ್ಪಲ್ ಗಾಳಿಯಲ್ಲಿ ಹಾರುತ್ತಿರುತ್ತದೆ. ಒಂತರಾ ವೇಸ್ಟ್ ಅನ್ನಬಹುದು. ಇದರಿಂದ ಅತಿ ಹೆಚ್ಚು ಸಂಕಟ ಪಡುವವರು ದ್ವಿಚಕ್ರ ವಾಹನದವರು. ಬೈಕ್-ನವರಿಗೆ ಮರಳಿನ ಸಿಂಚನ ಜೊತೆಗೆ ರಸ್ತೆ ಮೇಲೆ ಚೆಲ್ಲಿದ ಮರಳಿನಿಂದ ಜಾರುವ ಭೀತಿ.

ಈ ಮರಳಿನಲ್ಲಿ ಏನೋ ಇದೆ
ಕಣ್ಣಂಚಿನಲಿ ತುರಿಸಿ ಕೆಂಪಾಗಿದೆ

ಅಂತಾ ಹೇಳುತ್ತಾ ಹಿಡಿ ಶಾಪ ಹಾಕುತ್ತಾರೆನೋ! ಅಂದಹಾಗೆ ಮರಳು ಅಗೆದು ಅಗೆದು ನದಿ ಕೂಡಾ ಬಹು ಬೇಗನೆ ಬತ್ತಿಹೋಗುತ್ತವೆ. ಮರಳಿದ್ದರೆ ನದಿ ನೀರು ಸಮುದ್ರಕ್ಕೆ ಸೇರುವುದು ಸ್ವಲ್ಪ ನಿಧಾನ. ಮರಳೇ ಇಲ್ಲದಿದ್ದರೆ ನದಿ ನೀರು ಸರಾಗವಾಗಿ ಸಮುದ್ರ ಸೇರಿ ಜೀವ ಜಲವೇ ಬತ್ತಿ ಹೋಗುತ್ತವೆ. ಅದೇನಕ್ಕೆ ಮುಷ್ಕರ ಹೂಡುತ್ತಿದ್ದಾರೋ ಅನ್ನೋದು ನನಗೂ ತಿಳಿಯದು, ತಿಳಿಯುವ ಗೋಜಿಗೂ ಹೋಗಿಲ್ಲ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ತಮ್ಮ ಬಂದ್ ಯಶಸ್ವಿ ಎಂದು ಹೇಳಿಕೊಳ್ಳುವುದು ಇತ್ತೀಚೆಗೆ ಶೋಕಿಯ  ಹಾಗೂ ಪ್ರತಿಷ್ಟೆಯ ವಿಷಯವಾಗಿದೆ.

ಈ ಮರಳಿನ ದಂಧೆಯಲ್ಲಿ ರಾಜಕಾರಣಿಗಳು ಪ್ರತ್ಯಕ್ಷ/ಪರೋಕ್ಷ ಶಾಮಿಲಾಗಿರುವುದು ಎಲ್ಲರಿಗೂ ತಿಳಿದದ್ದೆ. ಪೋಲಿಸರಿಗೂ ಇವರಿಂದ ಮಾಮೂಲು ಸಂದಾಯವಾಗುತ್ತದೆ. ಇನ್ನು ಜನಸಾಮಾನ್ಯರ ಕಷ್ಟಕ್ಕೆ ಎಲ್ಲಿಯ ಬೆಲೆ. ಇಂತವರ ಮೊಂಡುತನಕ್ಕೆ ಸುಮ್ಮನೆ ಬೆಲೆಕೊಟ್ಟು ರಸ್ತೆಯಲ್ಲಿ ಪಯಣಿಸುವುದು ನಮ್ಮ ದುರಾದೃಷ್ಟ.

No comments:

Post a Comment

Printfriendly

Related Posts Plugin for WordPress, Blogger...