Sunday, July 29, 2012

ಮಳೆಗಾಲಕ್ಕೊಂದು ಕರಾವಳಿಯ ಕಷಾಯ

ಮಳೆಗಾಲವೆಂದರೆ ಕರಾವಳಿಯಲ್ಲಿ ಅನೇಕ ರೋಗಗಳ ಆಗಮನ ಕೂಡ. ರೋಗ ಅಂದರೆ ವಿಚಿತ್ರರೋಗಗಳಲ್ಲ, ಬದಲಾಗಿ ಶೀತ, ಕೆಮ್ಮು, ವಾತ, ಪಿತ್ತ ಮುಂತಾದವು. ಇದಕ್ಕೆ ಕರಾವಳಿಯವರು ಕಂಡುಕೊಂಡ ಪರಿಹಾರ ಕಾಲಕಾಲಕ್ಕೆ ಕೆಲವನ್ನು ಸೇವಿಸದೇ ಇರುವುದು. ಉದಾಹರಣೆಗೆ: ಆಷಾಡ ಮಾಸದ ಮಳೆ ಮತ್ತು ಚಳಿ ಸಮಯದಲ್ಲಿ ಮೊಸರು ಸೇವಿಸದೇ ಇರುವುದು, ಕೆಲವೊಮ್ಮೆ ಬೇಳೆ ಸೇವಿಸದೇ ಇರುವುದು ಮುಂತಾದವು. ಹಿಂದಿನ ಕಾಲದಲ್ಲಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇಂತಹ ವೃತಗಳನ್ನು ಆಚರಣೆಗೆ ತಂದಿದ್ದಾರೆ. ಮತ್ತೊಂದು ಪರಿಹಾರ ಎಂದರೆ ಮನೆಯಲ್ಲೇ ತಯಾರಿಸಿದ ಕೊತ್ತಂಬರಿ-ಜೀರಿಗೆ ಕಷಾಯ. ಇದು ದೇಹವನ್ನು ತಂಪಾಗಿಡುತ್ತಲ್ಲದೇ, ಶೀತ-ಕೆಮ್ಮಿನಿಂದಲೂ ದೂರವಿಡುತ್ತದೆ. ಕರಾವಳಿಯ ಹಳ್ಳಿಗಳಲ್ಲಿ ಮಾತ್ರವಲ್ಲ ಬದಲಾಗಿ ನಗರ ಪ್ರದೇಶಗಳಾದ ಉಡುಪಿ, ಮಂಗಳೂರಿನಲ್ಲೂ ಹಲವರು ಈ ಕಷಾಯ ಸಿದ್ಧಪಡಿಸುತ್ತಾರೆ. ಈ ಕಷಾಯ ಪುಡಿಯನ್ನು ಮಾಡುವುದು ಬಹು ಸುಲಭ

ಬೇಕಾಗುವ ಸಾಮಾಗ್ರಿಗಳು:
೧) ಕೊತ್ತಂಬರಿ - ೧ ಲೋಟೆ
೨) ಜೀರಿಗೆ - ಅರ್ಧ ಲೋಟೆ
೩) ಬಡಸೊಪ್ಪು - ಕಾಲು ಲೋಟೆ
೪) ಮೆಂತೆ - ಸ್ವಲ್ಪ ಸಾಕು (೧/೧೦ ಲೋಟೆ)
೫) ಕರಿಮೆಣಸು - ಸ್ವಲ್ಪ ಸಾಕು (೧/೧೦ ಲೋಟೆ). ಖಾರ ಹೆಚ್ಚು ಬೇಕಾದರೆ ಸ್ವಲ್ಪ ಹೆಚ್ಚಿಗೆ ಹಾಕಬಹುದು.

ಮಾಡುವ ವಿಧಾನ:
ಮೊದಲು ಮಿಶ್ರಣವನ್ನು ಬಾಣಲಿಯಲ್ಲಿ ಹಾಕಿ, ಸ್ವಲ್ಪ ಹೊತ್ತು ಬಿಸಿ ಮಾಡಬೇಕು. ಮಿಶ್ರಣ ಕಪ್ಪಾಗದಂತೆ ನೋಡಿಕೊಳ್ಳಬೇಕು. ಸ್ವಲ್ಪ ಬಿಸಿ ಮಾಡಿದರೆ ಸಾಕು. ನಂತರ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಸಣ್ಣಗೆ ಪುಡಿ ಮಾಡಬೇಕು. ಇಷ್ಟು ಮಾಡಿದರೆ ಕಷಾಯ ಪುಡಿ ತಯಾರು.

ಕಷಾಯ ಮಾಡುವ ವಿಧಾನ:
ಮೊದಲು ತಟ್ಟೆಯಲ್ಲಿ ಒಂದು ಲೋಟೆ ನೀರಿಗೆ ಒಂದು ಚಮಚ ಕಷಾಯ ಪುಡಿ ಹಾಕಿ ಕುದಿಸಬೇಕು. ಹೆಚ್ಚು ಕುದಿಸಿದರೆ ಕಷಾಯ ಹೆಚ್ಚು ಕಡಕ್ ಆಗುತ್ತದೆ. ಸ್ವಲ್ಪ ಹೆಚ್ಚು ಕುದಿಸಿದರೆ ಒಳ್ಳೆಯದು. ಕುದಿದ ನೀರನ್ನು ಸೋಸಿ ಹಾಗೆಯೇ ಕಷಾಯದ ನೀರನ್ನು ಕುಡಿಯಬಹುದು. ಇಲ್ಲವೇ ಸ್ವಲ್ಪ ನೀರು ಹಾಲಿಗೆ ಕಷಾಯದ ನೀರನ್ನು ಬೆರೆಸಿ ಕುಡಿಯಬಹುದು. ಬೇಕಾದರೆ ಸ್ವಲ್ಪ ಸಕ್ಕರೆ ಹಾಕಿಕೊಳ್ಳಿ. ಮಳೆ ನೋಡುತ್ತಾ ಈ ಕಷಾಯವನ್ನು ಸವಿಯುವುದೇ ಆನಂದ. ದಿನಕ್ಕೆ ಎರಡು ಬಾರಿ ಕಾಫಿ-ಚಹಾ ಬದಲು ಕಷಾಯವನ್ನು ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು. ಈ ಕಷಾಯ ಮಳೆಗಾಲಕ್ಕೆಂದೇ ಮಾಡಿದರೂ ಇದು ಯಾವ ಕಾಲಕ್ಕೂ ಅನುಕೂಲಕ್ಕೆ ಬರುತ್ತದೆ.

No comments:

Post a Comment

Printfriendly

Related Posts Plugin for WordPress, Blogger...